Saturday, December 28, 2013

ಇಬ್ಬರ ನಗೆಯಲ್ಲಿ ವಿಷಾದವಿತ್ತು!


ಯೂನಿವರ್ಸಿಟಿಯಲ್ಲಿ ಓದುವಾಗ ನನ್ನ ಕ್ಲಾಸ್ ಮೇಟ್ ಒಬ್ಬ.. ತುಂಬಾ ವಿಚಿತ್ರವಾದ ಮನಸ್ಥಿತಿ ಆತನದ್ದು. ಯಾಕೆ ವಿಚಿತ್ರ ಅಂದ್ರೆ ಆತನ ಪ್ರಕಾರ ಹೆಣ್ಣುಮಕ್ಕಳು ಮನೆಯಲ್ಲಿ ಇರಬೇಕು, ಅಕಸ್ಮಾತ್ ಹೊರಗೆ ಬಂದರೂ ಸಹ ಆಕೆ ಹಾಗಿರ ಬೇಕು,ಹೀಗಿರ ಬೇಕು ಎಂದು ಹೇಳುವ ಟೈಪ್. ನೋಡ್ತಾ ಇರಿ ನನ್ನ ಮದುವೆ ಆದ ಮೇಲೆ ನಾನು ನನ್ನ ಹೆಂಡತಿಯನ್ನು ಯಾವರೀತಿ ನೋಡಿಕೊಳ್ತೀನಿ ಅಂತ ಮೀಸೆ ತೀಡುವ ಪೈಕಿ. ಸದಾ ಮುರ್ನಾಲ್ಕು ಹೆಣ್ಣು ಮಕ್ಕಳ ಜೊತೆ ಓಡಾಡುತ್ತ ಇಂತಹ ಮಾತುಗಳನ್ನು ಆಡುವ ಶೂರ. ನಾನು ಅವನ ಬಗ್ಗೆ ಹೆಚ್ಚು ಏನು ಅಂದುಕೊಂಡಿರಲಿಲ್ಲ, ಆದರೆ ಇಂತಹ ಮನಸ್ಥಿತಿಯ ಹುಡುಗರ ಬಗ್ಗೆ ತಿಳಿದಿದ್ದರಿಂದ ನನಗೆ ಹೆಚ್ಚೇನು ಅನ್ನಿಸದೇ ಇದ್ದರೂ ಲೇಯ್ ನಿನ್ನ ಮದುವೆಗೆ ನಾವೆಲ್ಲಾ ಒಂದು ಕುಡ್ಲು ಕೊಡ್ತೀವಿ ಅದನ್ನ ತೆಗೆದುಕೊಂಡು ನಿನ್ನ ಹೆಂಡತಿ ಹಿಂದೆ ಓಡಾಡು.. ರಕ್ಷಿಸು ಎಂದೆಲ್ಲಾ ಹೇಳಿ ಕಿಚಾಯಿಸುತ್ತಿದ್ದೆವು.. ಅದಾದ ಬಳಿಕ ಓದು ಮುಗಿಯಿತು... ಒಬ್ಬೊಬ್ಬರ ದಾರಿ ಒಂದೊಂದು ಕಡೆ.. ಆದರೆ ಕೆಲವರು ಆಗಾಗ ತಮ್ಮ ಇರುವಿಕೆ ತೋರುತ್ತಿದ್ದರು.. ಕ್ರಮೇಣ ಎಲ್ಲವು ಮಸುಕು ಮಸುಕು.. ಭೂಮಿ ಗುಂಡಗಿದೆ ಅಂತಾರಲ್ಲ ಹಾಗೆ ಒಮ್ಮೆ ನನಗೆ ಫೇಸ್ ಬುಕ್ ಮುಖಾಂತರ ಹಳೆ ಗೆಳೆಯ ಸಿಕ್ಕ, ಅವನ ಮೂಲಕ ಮತ್ತೊಂದಷ್ಟು.ಮೇಲೆ ಹೇಳಿದ್ದೆನಲ್ಲ ಅವನ ಫೋನ್ ನಂಬರ್ ಸಹ ದೊರಕಿತು. ಹೀಗೆ ಒಮ್ಮೆ  ಆತ ಮಾತನಾಡುತ್ತಾ ಏನಮ್ಮ ಚನ್ನಾಗಿದ್ದೀಯಾ ನನ್ನದು ಆನಂದ ಸಂಸಾರ, ಹೆಂಡತಿ ಮಕ್ಕಳೊಂದಿಗೆ ಆರಾಮವಾಗಿ ಇದ್ದೀನಿ ಎಂದು ತನ್ನ ಸಂತೃಪ್ತ ಕುಟುಂಬದ ಬಗ್ಗೆ ಹೇಳಿದ.. ನಾನು ಏನು ಬೆಂಗಳೂರಿನ ಕಡೆಗೆ ಬಂದಿದ್ದೀಯ? ಎಂದಾಗ ಮತ್ತೊಬ್ಬಳು ಫ್ರೆಂಡ್ ಹೆಸರನ್ನು ಹೇಳಿ ಅವಳ ಭೇಟಿ ಮಾಡಲು ಬಂದಿದ್ದೀನಿ ಎಂದು ಹೇಳಿದ.. ಅದಾದ ಬಳಿಕ ಮತ್ತೆ ಮಸುಕಾದ ಬಾಂಧವ್ಯಗಳು ಮತ್ತೇ ಗಟ್ಟಿ ಆಯಿತು.. ಆದರೂ ನನ್ನ ಕೆಲಸದ ವೈಖರಿಯಿಂದ ಸ್ನೇಹಿತರ ಭೇಟಿ ಅಸಾಧ್ಯವಾಗಿತ್ತು, ಆದರೂ ಆಗಾಗ ಫೋನ್ ಮೂಲಕ ಮಾತನಾಡುವುದು ನಡೆದೇ ಇತ್ತು. ನನ್ನ ಗೆಳತಿಯರಲ್ಲಿ ಒಬ್ಬಾಕೆ ಬಾಂಧವ್ಯ ಮತ್ತೇ ಚಿಗುರಿತು.. ಹೆಚ್ಚು ಗಟ್ಟಿ ಆಯಿತು. ಆಕೆ ಒಮ್ಮೆ ಮಾತಿನ ನಡುವೆ ಈತನ ಬಗ್ಗೆ ಹೇಳಿದ ಕಥೆಗಳು ಸಣ್ಣ ಎಳೆಯ ದಿಗ್ಭ್ರಾಂತಿ ಮೂಡಿಸಿತ್ತು. ಆತ ನಮ್ಮೆಲ್ಲರ ಮುಂದೆ ತುಂಬಾ ಸಭ್ಯನಂತೆ ಸೋಗಲಾಡಿತನ ತೋರಿದ್ದವನು, ಹೆಣ್ಣಿನೊಂದಿಗೆ  ಅನೈತಿಕ ಬಾಂಧವ್ಯ ಬೆಳೆಸಿದ್ದ. ಆತನ ಮಾತಿನ ಶೈಲಿಗೆ ಅವನ ಬಗ್ಗೆ ಇಟ್ಟಿದ್ದ ಗೌರವ ....! ಮುಖ್ಯವಾಗಿ ರೆಡ್ ಹ್ಯಾಂಡ್ ಆಗಿ ಆತ ಊರವರ ಕೈಲಿ ಸಿಕ್ಕಿ ಹಾಕಿಕೊಂಡಿದ್ದ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಲಕ್ಷಗಳು ಆತನ ಕೈ ಬಿಟ್ಟಿತ್ತು. ಆ ಸಮಯದಲ್ಲಿ ಅಲ್ಲಿ ಜಡ್ಜ್ ಆಗಿದ್ದ ನನ್ನ ಗೆಳತಿಯ ಗೆಳತಿಯಿಂದ ಸಮಸ್ಯೆ ಬಗೆ ಹರಿದಿತ್ತು. ಅದ್ಯಾಕೆ ಅವನು ಅಷ್ಟು ಸರ್ತಿ ಬೆಂಗಳೂರಿಗೆ ಬರುತ್ತಿದ್ದ ಎಂಬುದರ ಅರಿವು ಆಗ ಆಗಿತ್ತು..! ಜೊತೆಗೆ ಅದ್ಯಾಕೆ ಅವನು ತನ್ನ ಮನೆಯನ್ನು ಆನಂದಸಾಗರ ಎಂದು ಪದೇ ಪದೇ ಹೇಳಿದ್ದು ಅನ್ನುವುದರ ಅರ್ಥ ವಾಗಿತ್ತು. ಅದನ್ನು ಹೇಳಿ ಅವಳ ಮುಂದೆ ನಕ್ಕೆ.. ಇಬ್ಬರೂ ನಕ್ಕೆವು.. ಅದರಲ್ಲಿ ವಿಷಾದದ ಛಾಯೆ ಹೆಚ್ಚಿತ್ತು! 

No comments:

Post a Comment