Monday, January 25, 2010

ನೆನಪು


ಕಳೆದವಾರ  ಮೂರ್ನಾಲ್ಕು ದಿನ ಶಿರಡಿಗೆ ಹೋಗಿದ್ದೆ.ನಾನು ಅತಿಯಾಗಿ ನಂಬುವ ಗುರುಗಳು ಶಿರಡಿ ಸಾಯಿ ಬಾಬಾ . ನಮ್ಮ ಮನೆಯಲ್ಲಿ ಕಳೆದ ಎಂಬತ್ತು ವರ್ಷಗಳಿಂದ ಈ ಗುರುಗಳನ್ನು ನಂಬುತ್ತ  ಬಂದಿದ್ದೇವೆ.ನಮ್ಮ ತಾತ ಬಾಬಾ  ಭಜನೆಯನ್ನು ತಪ್ಪದೆ ಪ್ರತಿಗುರುವಾರ ಸಂಜೆ ಮಾಡುವ ಪರಿಪಾಟ ಇಟ್ಟುಕೊಂಡಿದ್ದರು ನಮ್ಮ ಊರಲ್ಲಿ ,ನಮ್ಮನೆಯಲ್ಲಿ ನಾವೆಲ್ಲರೂ ಬಾಬಾ  ಅವರನ್ನು ಪ್ರೀತಿಯಿಂದ ನಂಬಿದ್ದೇವೆ.ಎಲ್ಲ ಯಾತ್ರಾ ಸ್ಥಳಗಳಂತೆ ಇದು ಒಂದು,ಆದ್ರೆ ಇಲ್ಲಿ ಭಿಕ್ಷುಕರ ಹಾವಳಿ ಮತ್ತು ನಾಯಿಗಳ ಒಡನಾಟ.ಎಷ್ಟೊಂದು ಗುಲಾಬಿ  ಹೂವುಗಳು  ಎಲ್ಲಿ  ಬೆಳೀತಾರೊ ?,ಅಂತೂ ಎಲ್ಲ ಕಡೆ ಈ ಹೂವಿನ ಗುಚ್ಛ ಮಾರುವ ಯುವಕರು,ಮಕ್ಕಳು....! ಆದರೆ ನನಗೆ ಇಲ್ಲಿ ಒಂದು ಅಂಶ ಹೆಚ್ಚು ಗಮನ ಸೆಳೆಯಿತು.ಶಿರಡಿಗೆ ಬಂದ ಭಕ್ತರಲ್ಲಿ ಶೇ.ಒಂದರಷ್ಟು ಮೆ೦ಟಲಿ  ಚಾಲೆಂಜ್ದ್ . ಅದರಲ್ಲೂ ಹೆಚ್ಚಿನ ಪಾಲು ಮಕ್ಕಳು. ತಾಯಿ ತಂದೆಯರು ಬಾಬಾ ದರ್ಶನಕ್ಕೆ  ಈ ಕಂದಮ್ಮಗಳು! ನಾನು ನನ್ನ ಅಮ್ಮ ಹೀಗೆ ಒಂದು ಕಡೆ ನಿಂತಿದ್ದಾಗ ಹದಿನಾಲ್ಕು ವರ್ಷದ ಒಂದು  ಮಗು ಕೈ ನನ್ನ ತಾಯಿ ಕೈಗೆ ತಗುಲಿತು.ಆ ಹುಡುಗ ಬೃಹದ್ದೇಹಿ! ನಾನು ಅಮ್ಮನ ಬಳಿ ಏನಾಯಿತು ಅಂದೇ,ಆ ಮಗು ಪೆಚ್ಚಾಗಿ ತನ್ನ ಕೈ ತಗುಲಿತು ಅಂತ ಹೇಳಿತು. ತಕ್ಷಣ ಆ ಮಗುವಿನ ತಾಯಿತಂದೆ ಸಾರಿ ಕೇಳಿದರು.ನನ್ನ  ಅಮ್ಮ ಜಾನೆದೋ ಬೇಟ ಪರವಾ ನಹಿ ! ಅಂತ ಆ ಮಗುವಿನ ತಲೆ ಸವರಿದರು.
 ಮೆ೦ಟಲಿ ಚಾಲೆಂಜ್ದ್  ಮಕ್ಕಳ ಬಗ್ಗೆಯೂ ನನ್ನ ಅಮ್ಮನಿಗೆ ಅಪಾರವಾದ ಪ್ರೀತಿ.ನನ್ನ ಸೋದರ ಮಾವನ ಮಗಳು ಕುಸುಮ. ಅವಳು ಸಹ ಹೀಗೆ ಹುಟ್ಟಿದ್ದು.ಅವಳಿಗೆ ಅಮ್ಮನ ಮೇಲೆ ಅಪಾರವಾದ ಪ್ರೀತಿ . ಅಟ್ಟತ್ತೆ ,ಎಂಕವ್ವ ,ಜೇಶಿ..ಸದಾ ಹೇಳ್ತಾ ಇದ್ದ ಹೆಸರುಗಳು.ರಜೆಯಲ್ಲಿ ಊರಿಗೆ ಹೋದಾಗ ಕುಸುಮಳನ್ನು ಕರೆದುಕೊಂಡು ಇಡೀ ಊರು ಓಡಾಡಿಸ್ತಾ ಇದ್ದೆ. ಬೆಂಗಳೂರಿಗೆ ಅವಳು ಬಂದಾಗಲು ತುಂಬಾ ಪ್ರೀತಿಯಿಂದ ಕರೆದುಕೊಂಡು ಓಡಾಡಿಸ್ತಾ ಇದ್ದೆ. ನಾನು ಅವಳಿಗಿಂತ ತುಂಬಾ ಚಿಕ್ಕವಳು , ಆದರೆ ನನ್ನ ಗೆಳತಿ ಅವಳು.ನಮ್ಮ ಅತ್ತೆ-ಮಾವ ,ಅಮ್ಮ , ನನ್ನವ್ವ  (ಅಜ್ಜಿಯನ್ನು ನಾವು ಅಜ್ಜಿ ಅಂತ  ಕರೆಯಲ್ಲ ಅವ್ವ ಅನ್ನೋದು), ನಾನು ಎಲ್ಲರು ಅವಳ ಬಗ್ಗೆ ಕಾಳಜಿ  ಇಟ್ಟಿದ್ದೆವು.ಯಾಕೋ ನಮ ಮಾವ ಅವಳನ್ನು ಶಾಲೆಗೇ ಕಳಿಸಲಿಲ್ಲ. ಊರಲ್ಲಿ  ಯಾರಾದರು ಅವಳನ್ನು ಬೈದರೆ  ಮನೆಗೆ ಬಂದು ಗೋಡೆಯ ಮುಂದೆ ನಿಂತು ಬೈತಾ ಇರೋಳು.ಅವಳ ಈ ಚರ್ಯೆಗಳನ್ನು ನಾನು ತುಂಬಾ ಹತ್ತಿರದಿಂದ ಕಂಡಿದ್ದೆ.ಕಾಲ ಯಾವುದನ್ನು ತಡಿಯಲ್ಲ.ಆದರೆ ಪ್ರಕೃತಿ ತನ್ನ ಕೆಲಸ ಮಾಡುತ್ತಲೇ ಇರುತ್ತದೆ.ಕುಸುಮ ಸಹ ಹೆಣ್ಣಾಗುವ  ಕಾಲ ಹತ್ತಿರ ಬಂದಿತ್ತು.ಆದರೆ.... ಒಂದು  ದಿನ ಕುಸುಮ ಸತ್ತು ಹೋದಳು...! ಬೆಳೆದರೆ ಮಗಳ ಗತಿಯೇನು ಅವಳನ್ನು ರಕ್ಷಿಸುವುದು ಹೇಗೆ ಎನ್ನುವ ಚಿಂತೆಯನ್ನು ದೂರಮಾಡಿ ನಮ್ಮ ಕುಸುಮ ಹೊರಟೆ ಹೋದಳು...! ಶಿರಡಿಯಲ್ಲಿ ಅದ್ಯಾಕೋ ತುಂಬಾ ವರ್ಷಗಳ ನಂತರ ಕುಸುಮ ತುಂಬಾ ನೆನಪಾದಳು.

1 comment:

  1. ನಿಮ್ಮ ಬರಹ ನನ್ನ ಮಗಳು ಗೌರಿಯ ಸದ್ಯದ ಪರಿಸ್ಥಿತಿಯನ್ನು ಮತ್ತೆ ನೆನಪಿಸಿತು. ನಮ್ಮ ಮಗಳು ಗೌರಿ ಕೂಡ ವಿಶೇಷ ಮಗು. ಅವಳನ್ನು ಒಮ್ಮೆ ಶಿರಡಿಗೆ ಕರೆದುಕೊಂಡು ಹೋಗಿ ಬಾಬಾನಲ್ಲಿ ಬೇಡಿಕೊಳ್ಳಿ ಅಂತ ತುಂಬ ಜನ ಸಲಹೆ ನೀಡಿದ್ದಾರೆ. ಧಾರ್ಮಿಕ ಶ್ರದ್ಧೆಯ ಉತ್ತಮ ಫಲಿತಾಂಶದ ಬಗ್ಗೆ ನನಗೆ ನಂಬಿಕೆ ಇದೆ. ಆದರೆ, ಅದು ಔಷಧದ ರೀತಿ ಕೆಲಸ ಮಾಡೀತಾ ಎಂಬ ಅನುಮಾನವೂ ಇದೆ. ಹೀಗಾಗಿ, ಇದುವರೆಗೆ ಹೋಗಿಲ್ಲ. ನಿಮ್ಮ ಅನುಭವ ಹೇಗೆ? ಅದರಿಂದ ಗೌರಿಯಂಥ ವಿಶೇಷ ಮಕ್ಕಳ ಮೇಲೆ ಉತ್ತಮ ಪರಿಣಾಮ ಆದೀತಾ?

    ReplyDelete